ಸಾಕ್ಷಿ

ಸಾಹಿತ್ಯ ಸಂಸ್ಕೃತಿಗಳ ವಿಚಾರ ವಿಮರ್ಶೆಯ ವೇದಿಕೆ

ಗೋಪಾಲಕೃಷ್ಣ ಅಡಿಗರು ನವ್ಯ ಚಳುವಳಿಗೆ ಹೇಗೋ ಅವರ ‘ಸಾಕ್ಷಿ’ ಸಾಹಿತ್ಯ ಪತ್ರಿಕೆಗಳ ಪಂಕ್ತಿಯಲ್ಲಿ ಹಾಗೆ. ಅಡಿಗರನ್ನು ಬಿಟ್ಟು ಕನ್ನಡದ ನವ್ಯ ಕಾವ್ಯದ ಚರ್ಚೆ ಸಾಧ್ಯವಿಲ್ಲ. ಹಾಗೆಯೇ ಸಾಕ್ಷಿಯನ್ನು ಬಿಟ್ಟೂ ನವ್ಯ ಕಾವ್ಯದ ಚರ್ಚೆ ಸಾಧ್ಯವಿಲ್ಲ. ಯಾಕೆಂದರೆ ನವ್ಯ ಕಾವ್ಯದ ಹೊಸ ಹೊಸ ಸೃಷ್ಟಿಗಳಿಗೆ ವೇದಿಕೆಯಾದದ್ದು ‘ಸಾಕ್ಷಿ.’ ನವ್ಯ ಸಾಹಿತ್ಯಕ್ಕೆ ಸಂಬಂಧಿಸಿದ ಚರ್ಚೆಗಳಿಗೆ ವಿವಾದಗಳಿಗೆ ಅಭಿವ್ಯಕ್ತಿಯ ಮಾಧ್ಯಮವೂ ‘ಸಾಕ್ಷಿ’ಯಾಗಿತ್ತು. ಹಾಗೆಯೇ ಅಡಿಗರು ತಮ್ಮ ವಿಚಾರ ಪೂರಿತ ಸಂಪಾದಕೀಯಗಳ ಮೂಲಕ ಕನ್ನಡ ನವ್ಯ ಕಾವ್ಯಕ್ಕೊಂದು ಸ್ಪಷ್ಟತೆ ಹಾಗೂ ಹಿರಿಮೆ ತಂದುಕೊಟ್ಟಿದ್ದು ಸಾಕ್ಷಿಯ ಮೂಲಕ. ನವ್ಯ ಕಾವ್ಯ ಬೆಳದಂತೆ ಸಾಕ್ಷಿಯೂ ಬೆಳೆಯಿತು. ಎಪ್ಪತ್ತರ ದಶಕದ ಕೊನೆಯಲ್ಲಿ ಕ್ರಮೇಣ ಜನರಲ್ಲಿ ನವ್ಯ ಸಾಹಿತ್ಯದ ಮೇಲಿನ ಆಸಕ್ತಿ, ಕಳಕಳಿ, ಒಲವು ಕಡಿಮೆಯಾದಂತೆಲ್ಲ ಚಳುವಳಿಯ ಮುಖವಾಣಿಯಾದ ಸಾಕ್ಷಿಯೂ ಕೂಡಾ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳಬೇಕಾಯಿತು. ಸಾಕ್ಷಿ ಆರಂಭವಾದುದು ೧೯೬೨ರಲ್ಲಿ ತ್ರೈಮಾಸಿಕವಾಗಿ, ಗೋಪಾಲಕೃಷ್ಣ ಅಡಿಗರು ಅದರ ಸಂಪಾದಕರು. ಹೆಗ್ಗೋಡಿನ ‘ಅಕ್ಷರ ಪ್ರಕಾಶನ ಸಾಗರ’ ಸಾಕ್ಷಿಯ ಪ್ರಕಾಶಕರು. ಸಾಕ್ಷಿಯ ಮೊದಲ ಸಂಚಿಕೆಯ ಸಂಪಾದಕೀಯದಲ್ಲಿ ಗೋಪಾಲಕೃಷ್ಣ ಅಡಿಗರು ಹೀಗೆ ನುಡಿದಿದ್ದಾರೆ. ‘. . . ಕೃತಿನಿಷ್ಠ ವಿಮರ್ಶೆಗೂ ವಸ್ತುನಿಷ್ಠ ವಿಚಾರಕ್ಕೂ ಒಂದು ವೇದಿಕೆಯಾಗುವ ಹಾಗೆ ‘ಸಾಕ್ಷಿ’ ಎಂಬ ಪತ್ರಿಕೆಯೊಂದನ್ನು ಪ್ರಕಟಿಸಬೇಕೆಂಬ ಹಂಬಲ ನಮ್ಮಲ್ಲಿ ಅನೇಕರನ್ನು ಹಲವಾರು ವರ್ಷಗಳಿಂದ ಕಾಡುತ್ತ ಬಂದಿದೆ. ಈ ಕೆಲಸಕ್ಕೆ ಮುಖ್ಯವಾದ ಆತಂಕಗಳು ಎರಡು. ಪತ್ರಿಕೆಯನ್ನು ಹೊರಡಿಸಿ ನಡೆಸಿಕೊಂಡು ಬರಲು ತಕ್ಕ ಅರ್ಥಾನುಕೂಲದ ಮತ್ತು ಜನಪ್ರಿಯವಾಗಲಾರದ ಈ ಸಾಹಸದಿಂದ ಬರುವ ಅರ್ಥನಷ್ಟವನ್ನು ಭರಿಸುವ ಶಕ್ತಿಯ ಅಭಾವ, ಅದಕ್ಕಿಂತ ಹೆಚ್ಚಾಗಿ ಚೆನ್ನಾಗಿ ಯೋಚಿಸಿ ಹೊಣೆಗಾರಿಕೆಯೊಡನೆ ತಕ್ಕಕಾಲಕ್ಕೆ ಉತ್ತಮ ಲೇಖನಗಳನ್ನು ಬರೆದುಕೊಡಬಲ್ಲ ಲೇಖಕರ ಸಹಕಾರದ ಅಗತ್ಯ . . . ಇದು ಯಾವುದೇ ಒಂದು ವ್ಯಕ್ತಿಯ, ಗುಂಪಿನ ಅಥವಾ ಪಂಥದ ಮುಖವಾಣಿಯಾಗಲು ಬಯಸುವುದಿಲ್ಲ. ಎಲ್ಲ ಬಗೆಯ ವಿಚಾರಗಳಿಗೂ ಸಿದ್ಧಾಂತಗಳ ಮಂಡನೆಗೂ ಇಲ್ಲಿ ಯಾವಾಗಲೂ ಅವಕಾಶ ಉಂಟು.’ ಸಾಕ್ಷಿ ಕನ್ನಡದಲ್ಲಿ ನವ್ಯ ಸಾಹಿತ್ಯಕ್ಕೆ ನೀರೆರೆದು ಪೋಷಿಸಿತಾದರೂ ಸಾಹಿತಿಗಳ ಗುಂಪುಗಾರಿಕೆಯಲ್ಲಿ ಬಸವಳಿಯಿತು. ನವ್ಯರಲ್ಲಿ ಹೊಸ ಹೊಸ ಪತ್ರಿಭೆಗಳನ್ನು ಪರಿಚಯಿಸಿತಾದರೂ ಜನಸಾಮಾನ್ಯ ಕನ್ನಡಿಗರ ಮಧ್ಯೆ ತನ್ನ ಪರಿಚಯವನ್ನು ಹೆಚ್ಚಿಸಿಕೊಳ್ಳುವಲ್ಲಿ ವಿಫಲವಾಯಿತು. ಪತ್ರಿಕೆಯನ್ನು ಆರಂಭಿಸುವಾಗ ಅಡಿಗರಿಗಿದ್ದ ಆತಂಕಗಳು ನಿಜವಾಗಿ ಪತ್ರಿಕೆಯ ಆರ್ಥಿಕ ನಷ್ಟ ಹಾಗೂ ಸಮರ್ಥ ಲೇಖನಗಳ ಕೊರತೆ ಹೊರಲಾರದ ಹೊರೆಯೆನಿಸಿದವು. ನವೋದಯ ಸಾಹಿತ್ಯದ ಜನಪ್ರಿಯತೆಯಿಂದಾಗಿ ಪತ್ರಿಕೆಗೆ ಕೆಲವಾದರೂ ಚಂದಾದಾರರ ಬಲವಿತ್ತು. ಮೊದಲಿಂದಲೂ ನವ್ಯಕಾವ್ಯ ಜನರಿಂದ ದೂರವೇ ಉಳಿದಿದ್ದರಿಂದ ಕೊಂಡು ಓದುವ ಚಂದಾದಾರರ ಬೆಂಬಲ ಸಾಕ್ಷಿಗೆ ಇರಲಿಲ್ಲ. ಅದನ್ನೇ ಸಾಕ್ಷಿಯ ೩೬ನೇ ಸಂಚಿಕೆಯಲ್ಲಿ ಸಂಪಾದಕ ಅಡಿಗರು ಎತ್ತಿ ಹೇಳುತ್ತಾರೆ. ‘ಕೂತು ಕಷ್ಟಪಟ್ಟು ಬರೆಯುವವರ, ಲೇಖನವನ್ನೇ ವೃತ್ತಿಮಾಡಿಕೊಳ್ಳಲು ಸಾಧ್ಯವಾಗದಿರುವ ಧೀಮಂತರ ಸಂಖ್ಯೆ ಕಡಿಮೆಯಾಗುವುದರಿಂದ ನಮ್ಮ ಉದ್ದೇಶಕ್ಕೆ ತಕ್ಕಂತೆ ಸಂಚಿಕೆಯನ್ನು ತರಲಾಗಿಲ್ಲ. . . ಸಂಭಾವನೆಯನ್ನು ಕೊಡುವುದು ಸಾಧ್ಯವಿಲ್ಲವಾಗಿ ಬಂದ ಲೇಖನಗಳನ್ನೇ ಪ್ರಕಟಿಸದೇ ಬೇರೆ ದಾರಿಯಿಲ್ಲ. ಕಥೆ, ಕವನ ಬಿಟ್ಟರೆ ಬೇರೆ ಪ್ರಕಾರದ ಬರಹಗಳೂ ಕಡಿಮೆಯೇ . . . ಸಂಚಿಕೆಯನ್ನು ನಿಲ್ಲಿಸದೇ ಬೇರೆ ದಾರಿಯಿಲ್ಲ’. ತ್ರೈಮಾಸಿಕಪತ್ರಿಕೆಯಾಗಿ ಆರಂಭಗೊಂಡ ‘ಸಾಕ್ಷಿ’ ಸ್ವಲ್ಪ ಕಾಲದ ನಂತರ ಅನಿಯತಕಾಲಿಕವಾಯಿತು. ೩೬ ಸಂಚಿಕೆಗಳ ನಂತರ ನಿಂತೇ ಹೋಯಿತು. ಹಲವು ವರ್ಷಗಳ ನಂತರ ನಿಂತೇ ಹೋಯಿತು. ಹಲವು ವರ್ಷಗಳ ನಂತರ ಸಾಗರದಿಂದ ಮತ್ತೆ ಮರುಹುಟ್ಟು ಪಡೆದು ಒಂದು ಸಂಚಿಕೆ ಮಾತ್ರ ಹೊರಬಂತು. ಅಡಿಗರ ಸ್ನೇಹಿತರಾಗಿದ್ದ ಅರೇಕಲ್ಲು ಪ್ರಭಾಕರ್‍ ತಮ್ಮ ಸಾಗರ ಮುದ್ರಣದಲ್ಲಿ ಸಾಕ್ಷಿಯನ್ನು ಮುದ್ರಿಸಿದರು. ಆದರೆ ಸಾಕ್ಷಿ ಮುಂದುವರೆಯಲಿಲ್ಲ. ಕನ್ನಡ ಸಾಹಿತ್ಯ ಪತ್ರಿಕೆಗಳ ಸೋಲುಗೆಲವಿಗೆ ಸಾಕ್ಷಿಯಾಗಿ ‘ಸಾಕ್ಷ’ ಇತಿಹಾಸ ಸೇರಿತು. ಸಾಕ್ಷಿಯ ಸಾಧನೆಗಳಿಗೆ ಗೋಪಾಲಕೃಷ್ಣ ಅಡಿಗರಷ್ಟೇ ಹೆಗ್ಗೋಡಿನ ಕೆ. ವಿ. ಸುಬ್ಬಣ್ಣ ಅವರೂ ಹೆಗಲುಕೊಟ್ಟವರು. ಅಡಿಗರು ಸಂಪಾದಕರಾದರೆ ಸುಬ್ಬಣ್ಣ ಅವರೂ ಹೆಗಲುಕೊಟ್ಟವರು. ಅಡಿಗರು ಸಂಪಾದಕರಾದರೆ ಸುಬ್ಬಣ್ಣ ಸಂಚಾಲಕರು. ಈ ಬಗ್ಗೆ ಸಾಕ್ಷಿ ೧೩ರಲ್ಲಿ ಸಂಪಾದಕನ ಮಾತು ಗಮನಾರ್ಹವಾದುದು. ‘ಆರ್ಥಿಕವಾಗಿ ಸಾಕ್ಷಿ ಹೆಚ್ಚು ಕಡಿಮೆ ತನ್ನ ಕಾಲ ಮೇಲೆ ತಾನು ನಿಲ್ಲಲು ಸಮರ್ಥವಾಗಿರುವುದು ಒಂದು ಬಗೆಯ ಸಿದ್ದಿಯೇ ಸರಿ. ಆಸ್ಥಾನಬಲವಿಲ್ಲದೆ. ಭಿನ್ನಮತ ಪತ್ರಿಪಾದಕವಾದೊಂದು ನಿಯತಕಾಲಿಕೆ ಬದುದಕುವುದು ಸಾಧ್ಯವಿದೆ ಎಂಬ ಅನುಭವ ತುಂಬ ಭರವೆಸೆ ಹುಟ್ಟಿಸುಂಥದು. ಈ ಸ್ಥಿತಿಯ ಸಾಧನೆಗೆ ಸಂಪಾದಕರ ಪರಿಶ್ರಮ ಕಾರಣವಲ್ಲ. ತುಂಬ ಚಿಕ್ಕವರಂತೆ ಕಾಣುವ ಒಬ್ಬ ದೊಡ್ಡ ಮನುಷ್ಯರ ಸಂಚಾಲಕ ಶಕ್ತಿಯೇ ಕಾರಣ ಎಂಬುದಾಗಿ ಹೇಳಲೇಬೇಕು. ಸಂಪಾದಕನ ಆಲಸ್ಯ, ವಿಳಂಬ ಎಲ್ಲವನ್ನೂ ಮೀರಿ ನಿಂತು ಕರ್ತವ್ಯನಿಷ್ಠವಾಗಿ ಕೆಲಸವನ್ನು ನೆರವೇರಿಸಬಲ್ಲ ಶಕ್ತಿ ಇದು ನಿಸ್ಪೃಹವಾಗಿ, ನಿರಹಂಕಾರಿಯಾಗಿ.’ ಮನ್ವಂತರ ಈ ಪತ್ರಿಕೆಯು ಕನ್ನಡ ‘ಸಾಹಿತ್ಯ ವಾರ್ಷಿಕ’ವೆಂದು ಕರೆದುಕೊಂಡದ್ದು ವಿಶೇಷ. ಧಾರವಾಡದ ಗೆಳೆಯರ ಗುಂಪಿನ ಕೊಡುಗೆ ಇದು. ಬೇಂದ್ರೆಯವರ ಹಿರಿತನದಲ್ಲಿ ಧಾರವಾಡದಲ್ಲಿ ಗೆಳೆಯರ ಗುಂಪೊಂದು ಸೃಷ್ಟಿಯಾಗಿ ಮನೋಹರ ಗ್ರಂಥಮಾಲೆಯ ಅಟ್ಟದ ಮೇಲೆ ನಿರಂತರ ಸಾಹಿತ್ಯಿಕ ಚಿಂತನ - ಚರ್ಚೆಗಳನ್ನು ನಡೆಸುತ್ತಾ ಕನ್ನಡದಲ್ಲಿ ನವೋದಯ ಸಾಹಿತ್ಯಕ್ಕೆ ನೀರೆರೆದುದು ಈಗ ಇತಿಹಾಸ. ಇದೇ ‘ಮನೋಹರ ಗ್ರಂಥಮಾಲೆ’ಯ ಸೋದರ ಪ್ರಕಾಶನವಾಗಿ ‘ಮನ್ವಂತರ’ ವಾರ್ಷಿಕ ‘ಪುಸ್ತಕ ಪತ್ರಿಕೆ’ ೧೯೬೨ರಿಂದ ಆರಂಭಗೊಂಡಿತು. ಮನ್ವಂತರದ ಮೊದಲ ಸಂಪಾದಕೀಯದಲ್ಲಿ ಸಂಪಾದಕರು ಹೀಗೆ ನುಡಿಯುತ್ತಾರೆ : "ಇಲ್ಲಿಯವರೆಗೆ ಕೇವಲ ಲಿಖಿತ ಸಾಹಿತ್ಯವನ್ನಷ್ಟೇ ಪ್ರಕಟಿಸುತ್ತಾ ಬಂದ ಮನೋಹರ ಗ್ರಂಥಮಾಲೆ ಜೊತೆಯಾಗಿ ವಿಮರ್ಶೆಯನ್ನು ಕೊಡಬೇಕೆಂದು ಮಾಡಿದ ಯೋಜನೆ ‘ಮನ್ವಂತರ’ದ ಹುಟ್ಟಿಗೆ ಕಾರಣವಾಗಿದೆ. ಕನ್ನಡದಲ್ಲಿ ಸಾಕಷ್ಟು ವಿಮರ್ಶೆ ಬಂದಿದೆ. ಆದರೆ ಸಾಹಿತ್ಯ ವಿಮರ್ಶೆಯ ಗೊತ್ತು-ಗುರಿಗಳು, ಮಿತಿ-ವ್ಯಾಪ್ತಿಗಳು ಇನ್ನೂ ನಿರ್ಣಾಯಕವಾಗಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ವಿಮರ್ಶೆಯ ಸಬಲವಾದ ಮಾಧ್ಯಮವಾಗಬಲ್ಲ ಭಾಷೆ ಮೊದಲು ರೂಪುಗೊಳ್ಳಬೇಕಾಗಿದೆ. ನಮ್ಮ ಎಷ್ಟೋ ವಿಮೆರ್ಶಯೇ ತತ್ವಾರಗಳು ಇನ್ನೂ ಅಮೂರ್ತತೆಯ ಗರ್ಭದಲ್ಲಿ ಹುದುಗಿಕೊಂಡಿವೆ. ಈ ಕೆಲಸಗಳು ಮನ್ವಂತರದ ಕಣ್ಣಮುಂದಿವೆ. ಹತ್ತು ವರ್ಷ - ವರ್ಷಕ್ಕೊಂದು ವಿಮರ್ಶಾ ಪುಸ್ತಕವಾಗಿ ಮನ್ವಂತರ ಪ್ರಕಟಗೊಂಡಿತು. ಅದಕ್ಕೆ ನಿಯತಕಾಲಿಕತೆ ಇತ್ತು. ಒಂದು ಸಂಚಿಕೆಯಿಂದ ಇನ್ನೊಂದಕ್ಕೆ ಮುಂದುವರಿಯುವಿಕೆ ಇತ್ತು. ಮನೋಹರ ಗ್ರಂಥಮಾಲೆಯ ಖಾಯಂ ಚಂದಾದಾರರಿಗೆ ಕಡಿಮೆ ಬೆಲೆಗೆ ‘ಮನ್ವಂತರ’ವನ್ನು ನೀಡಲಾಗುತ್ತಿತ್ತು. ‘ಮನ್ವಂತರ’ದ ಪ್ರತೀ ಸಂಚಿಕೆಯಲ್ಲೂ ಹಿಂದಿನ ವರ್ಷ ಪ್ರಕಟವಾದ ಕನ್ನಡ ಪುಸ್ತಕಗಳ ವಿಮರ್ಶೆ-ಸಮೀಕ್ಷೆ ಇರುತ್ತಿತ್ತು. ಹೀಗಾಗಿ ಆ ಹತ್ತು ವರ್ಷದ ಕಾಲ ಘಟ್ಟದ (೧೯೬೨ರಿಂದ ೧೯೭೨) ಸಾಹಿತ್ಯ ಬೆಲವಣಿಗೆಗೆ ‘ಮನ್ವಂತರ’ ಒಂದು ದಾಖಲೆಯಾಗಿ ನಿಲ್ಲುತ್ತದೆ. ಮುಖ್ಯವಾಗಿ ವಿಮರ್ಶೆಗೇ ಒತ್ತುಕೊಡುವ ಸಂಪ್ರದಾಯದ ‘ಮನ್ವಂತರ’ನವ್ಯ ಸಾಹಿತ್ಯದ ಸಾಧನೆ ಸಿದ್ಧಿಗಳನ್ನು ವಿಮರ್ಶಿಸಿದ್ದು ಹಾಗೂ ರೂಪುರೇಶಗಳನ್ನು ನಿರ್ಧರಿಸಿದ್ದು ದೊಡ್ಡಸಾಧನೆ. ಆದರೂ ಅಧ್ಯಯನಶೀಲ ಬರಹಗಾರರ ಕೊರತೆಯಿಂದಾಗಿ ‘ಮನ್ವಂತರ’ ನಿಲ್ಲಬೇಕಾಗಿ ಬಂತು.

ಸಂವಾದ

ಸಾಹಿತ್ಯಿಕ - ಸಾಂಸ್ಕೃತಿಕ ದ್ವೈಮಾಸಿಕ ಸಂಕಲನ

‘ಸಂವಾದ’ವು ಈಚಿನ ನಮ್ಮ ಸಾಹಿತ್ಯ ಪತ್ರಿಕೆಗಳ ಪೈಕಿ ವಿಶಿಷ್ಟ ಸ್ಥಾನ ಪಡೆದಿದೆ. ಮಧ್ಯ ಕರ್ನಾಟಕದ ಚಿತ್ರದುರ್ಗ ಜಿಲ್ಲೆಯ ಮಲ್ಲಾಡಿ ಹಳ್ಳಿಯಿಂದ ೧೯೮೬ರಿಂದ ಸುಮಾರು ಒಂದು ದಶಕ ನಡೆದು ಓದುಗರ ಮೇಲೆ ಭಿನ್ನ ಛಾಪು ಮೂಡಿಸಿದ ಪತ್ರಿಕೆ ‘ಸಂವಾದ’ ಯುವಕಥೆಗಾರ ರಾಘವೇಂದ್ರ ಪಾಟೀಲರು ‘ಸಂವಾದ’ದ ಮುಂದಾಳು. ಜಿ.ಪಿ. ಬಸವರಾಜು, ಚಂದ್ರಶೇಖರ ತಾಳ್ಯ ಹಾಗೂ ಸ. ಉಷಾ ಸಂವಾದದ ಪ್‌ಯತ್ನದಲ್ಲಿ ಭಾಗಿಯಾದವರು. ಮೊದಲ ಸಂಚಿಕೆಯ ಸಂಪಾದಕೀಯದಲ್ಲಿ ಸಂಪಾದಕರು ಹೀಗೆ ನುಡಿದಿದ್ದಾರೆ. “...ಸಂವಾದವು ರುಜುವಾತು, ಶೂದ್ರ, ಸಂಕ್ರಮಣ, ಅಂಕಣ ಮುಂತಾದ ಪತ್ರಿಕೆಗಳೊಂದಿಗೆ ಪೂರಕವಾಗಿ ಕೆಲಸ ಮಾಡುವ ಆಸೆ ಹೊಂದಿದೆ. ಹಳ್ಳಿಯ ಪ್ರಜ್ಞೆ ಮತ್ತು ಸಾಂಸ್ಕೃತಿಕ ಆವರಣಕ್ಕೆ ಅಭಿವ್ಯಕ್ತಿ ಕೊಡುವ ವಿಶೇಷ ಉದ್ದೇಶ ಹೊಂದಿದೆ. ಸಂವಾದ ಸಾಹಿತ್ಯಿಕ, ಸಾಂಸ್ಕೃತಿಕ ಸಂಕಲನ ಎಂಬುದಾಗಿ ಪತ್ರಿಕೆಯಲ್ಲಿ ಘೋಷಿಸಲಾಗಿದೆ. * ನಮ್ಮಸಾಹಿತ್ಯ, ಸಾಂಸ್ಕೃತಿಕ ಬದುಕಿನ ಸ್ಪಂದನಕ್ಕೆ ವಸ್ತು ನಿಷ್ಠ ಸತ್ಯದ ಆವಿಷ್ಕಾರಕ್ಕೆ ಎಂಬುದಾಗಿ ಪತ್ರಿಕೆಯಲ್ಲಿ ಉದ್ದೇಶವನ್ನು ಸ್ಪಷ್ಟಗೊಳಿಸಲಾಗಿದೆ. ಸಂವಾದದ ೨೬, ೨೭ನೇ ಸಂಚಿಕೆಗಳನ್ನು ಒಟ್ಟಾಗಿ ನೀಡಲಾಗಿದ್ದು ತಾರೀಖು, ತಿಂಗಳು ವರ್ಷವನ್ನು ನಮೂದಿಸುವುದು ವಿಶೇಷ. ಈ ಸಂಚಿಕೆಯ ಸಂಪಾದಕರ ಟಿಪ್ಪಣಿಗಳನ್ನು ಹೊಸ ಸಂಪಾದಕಿ ಸವಿತಾ ನಾಗಭೂಷನ ಬರೆದಿದ್ದಾರೆ. ‘ಇದೀಗ ಸಂವಾದದ ೨೬, ೨೭ನೇ ಸಂಚಿಕೆ ನಿಮ್ಮೊಂದಿಗಿದೆ. ಅದಷ್ಟು ಮೌಲಿಕ ಬರಹಗಳನ್ನು ಒಳಗೊಂಡ ಸಂಚಿಕೆಯನ್ನು ನಿಗದಿತ ಸಮಯದಲ್ಲಿ ನೀಡಬೇಕೆಂಬುದು ಸಂವಾದದ ಆಶೆ. ಈ ನೇಮವನ್ನು ಕಾಯ್ದುಕೊಳ್ಳಲು ಸತತವಾದ ಪ್ರಯತ್ನ ನಡೆದೇ ಇದೆ. ಆದರೂ ನಿರೀಕ್ಷೆಯಂತೆ ತರಲಾಗುತ್ತಿಲ್ಲವಲ್ಲ ಎಂಬ ಕೊರಗು ಹಾಗೆಯೇ ಉಳಿದಿದೆ. ಈ ನಿರೀಕ್ಷೆ ಕೊರಗುಗಳ ನಡುವೆ. . . ಸಂವಾದಕ್ಕೀಗ ಐದು ವರ್ಷ. . . ಈಗ ನಾನೇ ಅದರ ಕೈಹಿಡಿದಿದ್ದೇನೆ. ಇನ್ನೂ ಸ್ವಲ್ಪ ಕಾಲ ಅದರ ಲಾಲನೆ ಪಾಲನೆ ವರ್ಷ. . . ಈಗ ನಾನೇ ಅದರ ಕೈಹಿಡಿದಿದ್ದೇನೆ. ಇನ್ನೂ ಸ್ವಲ್ಪ ಕಾಲ ಅದರ ಲಾಲನೆ ಪಾಲನೆ ನನ್ನಿಂದ . . .ಸಂವಾದದ ಚಂದಾದಾರರ ಮತ್ತು ಲೇಖಕರ ಬಳಗದ ಸಲಹೆ ಸಹಕಾರ ಹಾಗೂ ಪ್ರೋತ್ಸಾಹವನ್ನು ನೀರಿಕ್ಷಿಸುತ್ತೇನೆ. ಹತ್ತು ವಸಂತಗಳನ್ನು ಕಂಡ ಸಂವಾದಕ್ಕೆ ಹೆಚ್ಚು ಪ್ರಸಾರವಿದ್ದರೂ ಸಾಹಿತ್ಯಸಕ್ತರ ನಡುವೆ ಜನಪ್ರಿಯವಾಗಿತ್ತು. ಕನ್ನಡ ಸಂಸ್ಕೃತಿಯ ಬಹುಮುಖ ಅಭಿವ್ಯಕ್ತಿಯ ಸಾಧನವಾಗಿ. ಯಾವ ಪಕ್ಷ, ಪಂಗಡಗಳ ಮುಲಾಜಿಗೂ ಒಳಗಾಗದೇ ಸಂವಾದ ಪ್ರಕಟವಾಯಿತು. ಸಂವಾದದ ಇನ್ನೊಂದು ಬಹಳ ಮುಖ್ಯ ಕೊಡುಗೆ ಸಂವಾದ ಪ್ರಕಾಶನದ ಮೂಲಕ ಹತ್ತಕ್ಕೂ ಮಿಕ್ಕು ಸಾಹಿತ್ಯ ಕೃತಿಗಳನ್ನು ಪ್ರಕಟಿಸಿರುವುದು. ಸದ್ಯಕ್ಕೆ ಸಂವಾದ ಸ್ಥಬ್ದವಾಗಿದೆ. ಸಂವಾದದಂಥ ಪತ್ರಿಕೆ ಚಲನಶೀಲತೆಯನ್ನು ಕಳೆದು ಕೊಳ್ಳುವುದು ಒಟ್ಟೂ ಕನ್ನಡದ ಸಂದರ್ಭಕ್ಕೆ ಆದ ನಷ್ಟವೆನ್ನಬಹುದು.

ಮಾತುಕತೆ (ನೀನಾಸಂ)

ಶ್ರೀ ನೀಲಕಂಠೇಶ್ವರ ನಾಟ್ಯ ಸೇವಾ ಸಂಘ

೧೯೮೫ರಲ್ಲಿ ಆರಂಭವಾದ ಖಾಸಗಿ ಪ್ರಸಾರದ ಈ ಪತ್ರಿಕೆಗೆ ಯಶವಂತ ಜಾಧವ್ ಸಂಪಾದಕರು. ನೀಲಕಂಠೇಶ್ವರ ನಾಟ್ಯಸೇವಾ ಸಂಘ (ನೀನಾಸಂ) ಶಿವಮೊಗ್ಗ ಜಿಲ್ಲೆಯ ಸಾಗರದ ಬಳಿಯ ಹಳ್ಳಿ. ನೀನಾಸಂ ಎಂದು ಕೊಡಲೇ ನೆನಪಿಗೆ ಬರುವುದು ಅದರ ಅಧ್ವರ್ಯ ಕೆ. ವಿ. ಸುಬ್ಬಣ್ಣನವರುದು. ನೀನಾಸಂ ನಾಟಕ ಶಾಲೆ, ನೀನಾಸಂ ರಂಗ ಮಂದಿರ, ನೀನಾಸಂ ಸಂಸ್ಕೃತಿ ಶಿಬಿರ, ನೀನಾಸಂ ತಿರುಗಾಟ, ಒಟ್ಟಾರೆ ಕನ್ನಡ ಸಾಂಸ್ಕೃತಿಕ ನಕ್ಷೆಯಲ್ಲಿ ಹೆಗ್ಗೋಡು ಎಂಬ ಹಳ್ಳಿಗೆ ಸ್ಥಾನವಿರುವ ಹಾಗೇ ನೀನಾಸಂಗೆ ವಿಶಿಷ್ಟ ಸ್ಥಾನವಿದೆ. ಹಳ್ಳಿಯಲ್ಲಿದ್ದುಕೊಂಡು ರಂಗಭೂಮಿಗೆ ಕೆ. ವಿ. ಸುಬ್ಬಣ್ಣ ಸಲ್ಲಿಸಿದ ಸೇವೆಗಾಗಿ ಅವರಿಗೆ ಮ್ಯಾಗ್‌ಸೆಸೇ ಪ್ರಶಸ್ತಿ ಪ್ರಾಪ್ತವಾಗಿದೆ. ನಿರಂತರವಾಗಿ ರಂಗಭೂಮಿಯ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ನೀನಾಸಂನಲ್ಲಿ ನಡೆಯುವ ಕೆಲಸಗಳನ್ನು ಆಸಕ್ತರು ಹಾಗೂ ಸ್ನೇಹಿತರಿಗೆ ತಲುಪಿಸುವ ಉದ್ದೇಶದಿಂದ ಆರಂಭವಾದ ಮಾತುಕತೆ ಇಂದು ರಂಗಭೂಮಿಯ ಪತ್ರಿಕೆಯೇ ಎಂದು ಕರೆಯಬಹುದಾದಷ್ಟರ ಮಟ್ಟಿಗೆ ತನ್ನ ಸೀಮಿತ ಚೌಕಟ್ಟಿನಲ್ಲಿ ಶಿಸ್ತಿನ ಕೆಲಸ ಮಾಡುತ್ತಿದೆ. ಈ ಹಿನ್ನಲೆಯಲ್ಲಿ ಒಂದು ಸಂಸ್ಥೆಯ ‘ಮಾತುಕತೆ’ಯಾದರೂ ನೀನಾಸಂನ ಈ ಖಾಸಗೀ ಪ್ರಸಾರದ ಪತ್ರಿಕೆಯನ್ನು ರಂಗಭೂಮಿಯ ಪತ್ರಿಕೆಯೆಂದೇ ರಂಗವಲಯಗಳಲ್ಲಿ ಗುರುತಿಸಲಾಗುತ್ತಿದೆ. ಡಾ. ಎಚ್. ಎ. ಪಾರ್ಶ್ವನಾಥರ ಮಾತುಗಳನ್ನು ಈ ಹಿನ್ನಲೆಯಲ್ಲಿ ಗಮನಿಸಬಹುದು. ‘ಇಂಡಿಯಾದ ಪ್ರಮುಖ ರಂಗ ಶಿಕ್ಷಣ ಕೇಂದ್ರಗಳಲ್ಲೊಂದಾದ ಹೆಗ್ಗೋಡಿನ ನೀಲಕಂಠೇಶ್ವರ ನಾಟಕ ಸಂಘಟವು (ನೀನಾಸಂ) ಸಹೃದಯರ ಮಧ್ಯೆ ಸಂಪರ್ಕದ ಇನ್ನೊಂದು ಸಾಧನವಾಗಿ ಮತ್ತು ಸಂಷಕದ ಎಲ್ಲ ಸಾಧನಗಳನ್ನು ಸಮರ್ಥವಾಗಿ ದುಡಿಸಿಕೊಂಡು ಹೊಸ ಸಮಾಜ ನಿರ್ಮಿಸುವ ಪ್ರಯತ್ನದಲ್ಲಿ ತನ್ನ ಅಳಿಲುಗೆಯ್ಮೆ ಸಲ್ಲಿಸುವ ಹಂಬಲವನ್ನೊತ್ತಿ ‘ಮಾತುಕತೆ’ ಎಂಬ ಖಾಸಗೀ ಪ್ರಸಾರದ ಕುಶಲ ಸಂಭಾಷಣೆಯ ತ್ರೈಮಾಸಿಕವನ್ನು ಫೆಬ್ರವರಿ ೧೯೮೭ರ ಲಾಗಾಯ್ತು ಜಶವಂತ ಜಾಧವ್ ಅವರ ಸಂಪಾದಕತ್ವದಲ್ಲಿ ಪ್ರಕಟಿಸುತ್ತದೆ.‘ಜಾನಪದ ಗಂಗೋತ್ರಿ’ಈಗ ಪ್ರಕಟಣೆಯಲ್ಲಿರುವ ಪತ್ರಿಕೆಗಳಲ್ಲಿ ‘ಜಾನಪದ ಗಂಗೊತ್ರಿ’ ವರ್ಣಮಯ ಮುಖಪುಟವನ್ನು ಹೊಂದಿ, ವಿದ್ವತ್‌ಪೂರ್ಣ ಲೇಖನಗಳನ್ನು ಒಳಗೊಂಡು ಬರುತ್ತಿರುವ ತ್ರೈಮಾಸಿಕ. ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡಮಿಯ ಆಶ್ರಯದಲ್ಲಿ ಹೊರಬರುತ್ತಿರುವ ಜಾನಪದ ಗಂಗೋತ್ರಿ ಪ್ರಕಟಣೆಯನ್ನಾರಂಭಿಸಿದ್ದು ೧೯೮೬ರಲ್ಲಿ. ೧/೮ ಡೆಮಿ ಆಕಾರದ ಸುಮಾರು ೯೬-೧೨೦ ಪುಟಗಳ ಪತ್ರಿಕೆಗೆ ಜಾನಪದ ಮತ್ತು ಯಕ್ಷಗಾನ ಅಕಾಡಮಿಯ ಅಧ್ಯಕ್ಷರು ಪ್ರಧಾನ ಸಂಪಾದಕರು. ಇದರ ಮೊದಲ ಸಂಪಾದಕರು ಅಕಾಡಮಿಯ ಮಾಜಿ ಸದಸ್ಯ ಹ. ಕ.ರಾಜೇಗೌಡರು. ಸರ್ಕಾರಿ ಅನುದಾನಿತ ಸಂಸ್ಥೆಯಾದ ಜಾನಪದ ಮತ್ತು ಯಕ್ಷಗಾನ ಅಕಾಡಮಿಯೇ ಜಾನಪದ ಗಂಗೋತ್ರಿಯ ಪ್ರಕಾಶನ ಸಂಸ್ಥೆಯಾದ್ದರಿಂದ ಚಂದಾದಾರರ ಸಹಕಾರದ ಮೇಲೆ ಪತ್ರಿಕೆ ನಡೆಯುವ ಸ್ಥಿತಿಯಿಲ್ಲ. ಹೀಗಾಗಿಯೇ ಪತ್ರಿಕೆಗೆ ಸಮಾರ್ಪಕವಾದ ಹಾಗೂ ವೃತ್ತಿಪರವಾದ ಮಾರಾಟ ವ್ಯವಸ್ಥೆ ಇಲ್ಲದಿದ್ದರೂ ಕಳೆದ ೧೨ ವರ್ಷಗಳಿಂದ (೧೯೮೬-೯೮) ಪ್ರಕಟಣೆಯಲ್ಲಿರುವುದು ಸಾಧ್ಯವಾಗದೆ. ಜಾನಪದಕ್ಕೆ ಸಂಬಂಧಪಟ್ಟ ಲೇಖನಗಳೂ, ಅಕಾಡಮಿಯ ಚಟುವಟಿಕೆಗಳೂ ಇಲ್ಲಿ ಬೆಳಕು ಕಾಣುತ್ತವೆ.

ಪುಸ್ತಕ ಪ್ರಪಂಚ

ವಯಸ್ಕರ ಶಿಕ್ಷಣ ಸಮಿತಿ

ಕರ್ನಾಟಕ ರಾಜ್ಯ ವಯಸ್ಕರ ಶಿಕ್ಷಣ ಸಮಿತಿಯ ಕೇಂದ್ರ ಸಮಿತಿ ಮೈಸೂರಿನಲ್ಲಿದೆ. ಈ ಸಮಿತಿಯ ಅಂಗವಾಗಿ ೧೯೪೩ರಿಂದ ನಿರಂತರವಾಗಿ ಸದ್ದಿಲ್ಲದೇ ಕನ್ನಡ ಸಾಹಿತ್ಯ, ಭಾಷಾಸೇವೆ ನಡೆಯುತ್ತಿರುವ ಮಾಧ್ಯಮಗಳಲ್ಲಿ ‘ಪುಸ್ತಕ ಪ್ರಪಂಚ’ವೊಂದು. ‘ಪುಸ್ತಕ ಪ್ರಪಂಚ’ವನ್ನು ವಯಸ್ಕರ ಶಿಕ್ಷಣ ಸಮಿತಿ ಪ್ರಕಟಿಸುವುದಾದರೂ ಅದು ಪ್ರಕಟಿಸುತ್ತಿರುವ ‘ಪುಸ್ತಕ ಪ್ರಪಂಚ’ ಕನ್ನಡ ಬಲ್ಲ ಎಲ್ಲರಿಗಾಗಿ. ಅದರಲ್ಲಿ ಸಾಹಿತ್ಯ, ಜನಪದ ಜನ ಜೀವನಕ್ಕೆ ಸಂಬಂಧಿಸಿದ ಲೇಖನಗಳಿರುತ್ತವೆ. ಕತೆ-ಕವನ, ಪ್ರಬಂಧಗಳಿರುತ್ತವೆ. ಮಹತ್ವದ ಸಾಹಿತಿಯ ಪರಿಚಯ, ಅವರ ಸಾಧನೆಗಳ ಸಮೀಕ್ಷೆ, ಕೃತಿಗಳ ವಿಮೆರ್ಶೆ ಪುಸ್ತಕ ಪ್ರಪಂಚ ಪ್ರತೀ ಸಂಚಿಕೆಯಲ್ಲೂ ತಪ್ಪದೇ ಮಾಡುವ ಕೆಲಸ. ಬೇರೆ ಭಾಷೆಯ ಮಹತ್ವದ ಲೇಖಕರನ್ನು ಕನ್ನಡಿಗರಿಗೆ ಪರಿಚಯಿಸುವ ಸಂಪತ್ರದಾಯವೂ ಪುಸ್ತಕ ಪ್ರಪಂಚದಲ್ಲಿದೆ. ಯಾವ ಪಂಥಕ್ಕಾಗಲೀ ಗುಂಪಿಗಾಗಲೀ ಕಟ್ಟುಬೀಳದೇ ನವೋದಯ, ನವ್ಯ, ದಲಿತ ಬಂಡಾಯದ ಬರಹಗಳಿಗೆಲ್ಲ ಯಾವುದೇ ಭೇದ ಭಾವ ತೊರದೇ ‘ಪುಸ್ತಕ ಪ್ರಪಂಚ’ ಪ್ರಕಟವಾಗುತ್ತದೆ. ೧/೮ ಡೆಮಿ ಆಕಾರದ ಪತ್ರಿಕೆಗೆ ಸಾಮಾನ್ಯವಾಗಿ ೮೦ ಪುಟಗಳು. ವಿಶೇಷ ಸಂಚಿಕೆಗಳಿಗೆ ಹೆಚ್ಚಿನ ಪುಟಗಳೂ ಇರುತ್ತವೆ. ಲೇಖಕರಿಗೆ ಕಿರು ಸಂಭಾವನೆ ನೀಡುವ ಸಂಪ್ರದಾಯವೂ ಪುಸ್ತಕ ಪ್ರಪಂಚದ ಬಗ್ಗೆ ಉಲ್ಲೇಖನೀಯವಾದುದು. ಡಾ. ದೇ.ಜವರೇಗೌಡ ಪುಸ್ತಕ ಪ್ರಪಂಚದ ಪ್ರಧಾನ ಸಂಪಾದಕರು. ಶ್ರೀ ಕೃಷ್ಣ ಆಲನಹಳ್ಳಿ ಗೌರವ ಸಂಪಾದಕರಾಗಿ ಮಲೆಯಾಳಂ ಲೇಖಕ ವೈಕಂಮಹಮದ್ ಬಷೀರ್‍ ಅವರನ್ನು ಕುರಿತಂತೆ ವಿಶೇಷಾಂಕ ತಂದಿದ್ದರು. ಕನ್ನಡದ ಹೆಸರಾಂತ ಸಾಹಿತಿಗಳು ಅನೇಕರು ಕಳೆದ ಐದು ದಶಕಗಳಲ್ಲಿ ಬೇರೆ ಬೇರೆ ಅವಧಿಗಳಲ್ಲಿ ಪುಸ್ತಕ ಪ್ರಪಂಚದ ಸಂಪಾದಕ ಮಂಡಳಿಯಲ್ಲಿ ಸೇವೆ ಸಲ್ಲಿಸಿದ್ದಾರೆ. ಲಿಯೋ ಟಾಲ್‌ಸ್ಟಾಯ್‌ರವರ ಮಹಾ ಕಾದಂಬರಿ ಯುದ್ಧ ಮತ್ತು ಶಾಂತಿ (War and Peace) ಪ್ರೋ. ದೇಜಗೌರವರು ಅನುವಾದಿಸಿದ್ದು ಪುಸ್ತಕ ಪ್ರಪಂಚದಲ್ಲಿ ಧಾರಾವಾಹಿಯಾಗಿ ಪ್ರಕಟಗೊಂಡಿದೆ. ಕನ್ನಡದ ಲೇಖಕರುಗಳೆಲ್ಲ ಒಂದಲ್ಲಾ ಒಂದು ಸಂದರ್ಭದಲ್ಲಿ ಪುಸ್ತಕ ಪ್ರಪಂಚಕ್ಕೆ ಬರೆದಿರುತ್ತಾರೆ. ಈ ರಾಶಿಯಲ್ಲಿ ‘ಪುಸ್ತಕ ಪ್ರಪಂಚ’ವು ೧೯೪೩ರಿಂದ ಕನ್ನಡ ಸಾಹಿತ್ಯದ ಜೊತೆಯಲ್ಲೇ ಹೆಜ್ಜೆ ಹಾಕುತ್ತಿದೆಯೆನ್ನಬಹುದು. ಪುಸ್ತಕ ಪ್ರಪಂಚಕ್ಕೆ ಸರ್ಕಾರಿ ಅನುದಾನಿತ ಸಂಸ್ಥೆಯಾದ ವಯಸ್ಕರ ಶಿಕ್ಷಣ ಸಮಿತಿಯ ಆಶ್ರಯವಿರುವುದರಿಂದ ಪತ್ರಿಕೆಯ ಲಾಭ ನಷ್ಟ ಮುಖ್ಯವಾಗದೇ ಪತ್ರಿಕೆ ಪ್ರಕಟಗೊಳ್ಳುತ್ತಿದೆ. ಈ ಸ್ಥಿತಿ ವ್ಯಕ್ತಿಗತ ಸಾಹಸಗಳಾದ ಪತ್ರಿಕೆಗಳಲ್ಲಿ ಕಂಡುಬರುವುದಿಲ್ಲ.

ಅರಿವು ಬರಹ

‘ಅರಿವು-ಬರಹ’ವೆಂಬುದು ೧೯೯೨ರಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಕೇಂದ್ರ ಸ್ಥಾನ ಕೊಣಾಜೆಯಿಂದ ಸ್ನಾತಕೋತ್ತರ ವಿಭಾಗಗಳ ಅಧ್ಯಾಪಕರುಗಳ ಗುಂಪೊಂದು ಹುಟ್ಟು ಹಾಕಿದ ಪತ್ರಿಕೆ. ‘ಅರಿವು-ಬರಹ’ದ ಸಂಚಿಕೆಗಳನ್ನು ಒಂದು ಎರಡು ಎಂದು ಮುದ್ರಿಸಲಾಯಿತೇ ವಿನಾ ನಿಗದಿತ ನಿಯತಕಾಲಿಕತೆಯನ್ನು ಘೋಷಿಸಿಕೊಂಡಿರಲಿಲ್ಲ. ‘ಅರಿವು-ಬರಹ-೧ರ ಒಳಹೊದಿಕೆಯಲ್ಲ ‘ಮಂಗೂರು ವಿಶ್ವವಿದ್ಯಾನಿಲಯದಿಂದ ಪ್ರಕಟವಾಗುವ ಪತ್ರಿಕೆ’ ಎಂಬುದಾಗಿ ಘೋಷಿಸಿ ಎರಡನೇ ಸಂಚಿಕೆಯಲ್ಲಿ ಅದಕ್ಕಾತಿ ವಿಷಾದ ಸೂಚಿಸಿ ಈ ಪತ್ರಿಕೆಗೂ ಮಂಗಳೂರು ವಿಶ್ವವಿದ್ಯಾನಿಲಯಕ್ಕೂ ಸಂಬಂಧವಿಲ್ಲ ಎಂಬ ಘೋಷಣೆ ಹೊರಡಿಸಲಾಯಿತು. ‘ಅರಿವು-ಬರಹ’ವನ್ನು ಶುದ್ಧ ಸಾಹಿತ್ಯಿಕ ಪತ್ರಿಕೆಯೆಂದು ಗುರುತಿಸುವುದು ಕಷ್ಟ. ಇದು ಮುಖ್ಯವಾಗಿ ವೈಚಾರಿಕ ಸಾಹಿತ್ಯ ಪತ್ರಿಕೆ. ಇಲ್ಲಿಯ ಭಾಷೆ ಜನರಿಗೆ ಅರ್ಥವಾಗುವಂತಿರಲಿಲ್ಲ. ಅರಿವು ಬರಹ ಕನ್ನಡದ ಪ್ರಚಲಿತ ಭಾಷೆಗೆ ಅನ್ಯವಾಗದೆ ಎಂಬುದುದಾಗಿ ಓದುಗರು ಆಕ್ಷೇಪ ವ್ಯಕ್ತಪಡಿಸಿದ್ದರು. ಅರಿವು ಬರಹ ಮೂರು ಸಂಚಿಕೆಗಳ ನಂತರ ಬರಲಿಲ್ಲ. ‘ಅರಿವು-ಬರಹ’ಕ್ಕೆ ‘ಎಂಟು ಮಂದಿ’ ಸಂಪಾದಕರುಗಳ ಹೆಸರಿದ್ದುದು.

ರಂಗಭೂಮಿ

ಒಂದು ಕಲಾ ಪತ್ರಿಕೆ

ಒಂದು ದಶಕಕ್ಕೂ ಮೀರಿ ಈ ಪತ್ರಿಕೆ ಯಶಸ್ವಿಯಾಗಿ ಪ್ರಸರಣಗೊಂಡಿತೆಂದು ಡಾ. ಎಚ್. ಎ. ಪಾರ್ಶ್ವನಾಥ್ ನುಡಿಯುತ್ತಾರೆ. ಆದರೆ ವಾಸ್ತವಾಗಿ ಡಿ. ಕೆ. ಭಾರದ್ವಾಜರು ಏಕಾಂಗಿಯಾಗಿ ಈ ಪತ್ರಿಕೆ ನಡೆಸಿದ್ದು ೧೯೨೫-೨೬ರಲ್ಲಿ. ಅಂದರೆ ಒಂದು ವರ್ಷ ಮಾತ್ರ. ನಂತರ ಅಮೆಚೂರ್‍ ಡ್ರಾಮಾ ಅಸೋಸಿಯೇಶನ್‌ನವರ ಪ್ರಯತ್ನದಿಂದ ೧೯೩೨ರಿಂದ ೧೯೩೪ರವರೆಗೆ ನಡೆಯಿತು. ಅಂದರೆ ಒಟ್ಟೂ ‘ರಂಗಭೂಮಿ’ ಹತ್ತು ವರ್ಷಗಳ ಜೀವಿತಾವಧಿಯಿದ್ದರೂ ಸತತವಾಗಿ ಅದ ಹೊರಬಂದಿದ್ದು ಎರಡು-ಮೂರು ವರ್ಷ ಮಾತ್ರ. ಆದರೆ ‘ರಂಗಭೂಮಿ’ ಕನ್ನಡ ಪತ್ರಿಕೋದ್ಯಮದಲ್ಲಿ ಹೊಸ ದಾರಿ ತುಳಿಯುವ ಮೂಲಕ ಎಂದೆಂದಿಗೂ ಮಾದರಿಯಾಗಿರುವುದನ್ನು ಅಲ್ಲಗಳೆಯುವಂತಿಲ್ಲ. ಅವರಿಗೆ ಕನ್ನಡದಲ್ಲಿ ಕಲಾ ಪ್ರಕಾರಕ್ಕೆ, ಮುಖ್ಯವಾಗಿ ನಾಟಕ ಕಲೆಗೆ ಮೀಸಲಾಗಿ ಪತ್ರಿಕೆಯೇ ಬಂದುದಿಲ್ಲ.‘ರಂಗಭೂಮಿ’ಯಲ್ಲಿ ಪ್ರಕಟಗೊಂಡ ಲೇಖನಗಳ ಮೇಲೆ ಕಣ್ಣಾಡಿಸಿದರೂ ಅವುಗಳ ಮಹತ್ತ್ವವನ್ನು ತಿಳಿಯಬಹುದು. ೧೯೨೫ರ ಅಕ್ಟೋಬರ್‍ -ನವೆಂಬರ್‍ -ಡಿಸೆಂಬರ್‍ ಸಂಚಿಕೆಗಳಲ್ಲಿ ಶಾಂತಕವಿಗಳ ನಾಟಕ ಪ್ರೇಮದ ಕುರಿತು ಹುಯಿಲಗೋಳ ನಾರಾಯಣರಾಯರ ಲೇಖನವೂ, ಕೆರೋಡಿ ಸುಬ್ಬರಾಯ ಮತ್ತು ಎಂ. ಜಿ. ವೆಂಕಟೇಶಯ್ಯನವರ ಕನ್ನಡ ರಂಗಭೂಮಿ ಇತಿಹಾಸ ಲೇಖನಗಳೂ ಪ್ರಕಟಗೊಂಡಿವೆ. ಆ ಕಾಲದ ರಂಗನಟರಿಗೆ ಹಾಗೂ ರಂಗಭೂಮಿಯ ಸಂಬಂಧ ಇಟ್ಟುಕೊಂಡವರಿಗೆಲ್ಲ ರಂಗಭೂಮಿ ಪತ್ರಿಕೆ ಪ್ರಚಾರದಲ್ಲಿತ್ತು. ಆರ್ಥಿಕವಾಗಿ ಇದು ಯಶಸ್ವಿಯಾಗದಿದ್ದರೂ ದ. ಕೃ. ಭಾರದ್ವಾಜರ ಆಸಕ್ತಿಯ ಹರಹುಗಳನ್ನು ಗಮನಿಸಿದರೆ ರಂಗಭೂಮಿಗಾಗಿ ಅವರ ಕೊಡುಗೆ ಮಹತ್ತ್ವದ್ದೆನಿಸುತ್ತದೆ. ೧೯೨೬ರಲ್ಲೇ ‘ಮೈಸೂರು ರಂಗಭೂಮಿ’ ಪತ್ರಿಕೆಯೊಂದು ಇದ್ದುದಾಗಿ ಕಂಡು ಬರುತ್ತದೆ. ಆದರೆ ಬೇರೆಲ್ಲೂ ಇದು ದಾಖಲಾಗಿಲ್ಲ. ಯಾರು ಸಂಪಾದಕರಾಗಿದ್ದರು ಎಂಬುದೂ ತಿಳಿದಿಲ್ಲ. ಭಾರದ್ವಾಜರ ರಂಗಭೂಮಿ (೧೯೨೫)ಯಿಂದ ಪ್ರೇರಿತರಾಗಿ ರಂಗಾಸಕ್ತರು ಯಾರೋ ಈ ಪತ್ರಿಕೆಯ ಪ್ರಯತ್ನ ಮಾಡಿರಬಹುದೆಂದು ನಂಬಬಹುದು.ಕನ್ನಡ ರಂಗಭೂಮಿಯಲ್ಲಿ ಬಹುಕಾಲ ನಿಂತ ರಂಗಪತ್ತಿಕೆಗಳು ಕಡಿಮಾಯದರೂ ಅಲ್ಲಲ್ಲಿ ಆಗೀಗ ಬಂದು ಹೋದ ರಂಗ ಪತ್ರಿಕೆಗಳ ಪಟ್ಟಿ ದೀರ್ಘವಾಗಿಯೇ ಇದೆ. ಬಳ್ಳಾರಿಯ ಕನ್ನಡ ನಾಟಕ ಕಲಾ ಪರಿಷ್ಯತ್ತಿನ ಕಲಾ (೧೯೩೦) ಅಂಥ ಒಂದು ಪತ್ರಿಕೆ. ಬಳ್ಳಾರಿಯಿಂದ ಕನ್ನಡ ನಾಟಕ ‘ಕಲಾ’ ಪರಿಷದ್ ಎಂಬ ಸಂಸ್ಥೆಯ ಆಶ್ರಯದಲ್ಲಿ ‘ಕಲಾ’ ಎಂಬ ಅಭಿದಾನವನ್ನು ಹೊತ್ತು ಮಾಸಪತ್ರಿಕೆಯೊಂದು ಹೊರಬಂದ ಬಗ್ಗೆ ಡಾ. ಎಚ್. ವಿ. ಪಾರ್ಶ್ವನಾಥ್ ‘ರಂಗಸಂಗ’ ಪುಸ್ತಕದಲ್ಲಿ ಬರೆಯುತ್ತಾರೆ. ಇದೇ ಹೊತ್ತಿಗೆ ಬೆಂಗಳೂರಿನಿಂದಲೂ ಕಲಾ ಹೆಸರಿನ ಪತ್ರಿಕೆ ‘ಕಲಾ ಮಂದಿರಂ’ ಅವರಿಂದ ಪ್ರಕಾಶನಗೊಂಡಿತು.‘ಕಲಾ’ ಕನ್ನಡದಲ್ಲಿ ಬಂದ ಕಲಾ ಪತ್ರಿಕೆಗಳ ಪೈಕಿ ಗುಣಮಟ್ಟದ ದೃಷ್ಟಿಯಿಂದ ಹಾಗೂ ಚಾರಿತ್ರಿಕವಾಗಿ ಮಹತ್ತ್ವದ ಸ್ಥಾನಗಳಿದ್ದು ಕಲಾ ಮಂದಿರಂನ ಅ. ನ. ಸುಬ್ಬರಾಯರು ಪ್ರಕಟಿಸಿದ ‘ಕಲಾ’ ಪತ್ರಿಕೆ. ಲಲಿತಕಲೆಗಳಿಗೆ ಮೀಸಲಾಗಿದ್ದ ಈ ಮಾಸಪತ್ರಿಕೆ ೧೯೩೦ರ ಮಾರ್ಚ್ ತಿಂಗಳಲ್ಲಿ ಆರಂಭವಾಗಿ ನಡುನಡುವೆ ನಿಯತವಾಗಿ ಪ್ರಕಟಗೊಳ್ಳದಿದ್ದರೂ ಒಟ್ಟೂ ೨೬ ವರ್ಷ ಬದುಕಿ ದಾಖಲೆ ಮಾಡಿದೆ. ಕಲಾ ಪತ್ರಿಕೆಯ ಮೊದಲಸಂಚಿಕೆಯಲ್ಲಿ ‘ಕಲೆಯ ಖನಿಯಂತಿದ್ದ ಕರ್ನಾಟಕದಲ್ಲಿ ಕಲೆಗಳು ಗಳಿತಾವಸ್ಥೆಯಲ್ಲಿದ್ದು ತಕ್ಕ ವ್ಯವಸಾಯವಿಲ್ಲದೆ ಸೊರಗುತ್ತಿವೆ. ಜನಸಾಮಾನ್ಯರಲ್ಲಿ ಕಲಾಭಿಮಾನವೂ ಉದ್ಯೋಗತತ್ಪರತೆಯೂ ಅಳಿಸಿಹೋಗಿರುವುದು. ಇಂಥ ಪರಿಸ್ಥಿತಿಯಿಂದ ಪಾರಾಗಿ ಕರ್ನಾಟಕದ ಕೀರ್ತಿಯನ್ನುಳಿಸಲು ವಿದ್ಯಾವಂತರೂ ಕಲಾಭಿಮಾನಿಗಳೂ ನಡೆಸಬೇಕಾದ ಕಾರ್ಯಗಳು ಅನೇಕವಿದೆ ಎಂಬುದನ್ನು ಮನಗಂಡು ಈ ಕ್ಷೇತ್ರದಲ್ಲಿ ಅಳಿಲು ಭಕ್ತಿ ಮಳಲು ಸೇವೆಮಾಡಲು ಈ ಪತ್ರಿಕೆಯನ್ನು ಸ್ಥಾಪಿಸುತ್ತಿದ್ದೇವೆ’ ಎಂಬುದಾಗಿ ಸಂಪಾದಕ ಅ. ನ. ಸುಬ್ಬರಾಯರು ನುಡಿದ್ದಾರೆ. ಪತ್ರಿಕೆಯನ್ನು ವಿದ್ಯಾ, ಲಲಿತಕಲೆ, ರಂಗಭೂಮಿ ಮತ್ತು ಕುಶಲ ವಿದ್ಯೆಗಳ ಮಾಸಪತ್ರಿಕೆ ಎಂದು ಕರೆಯಲಾಗಿತ್ತು. ಮೂಲತಃ ಅ. ನ. ಸುಬ್ಬರಾಯರು ಕಲಾವಿದರಾದ್ದರಿಂದ ಪತ್ರಿಕೆಯ ಒಲವು ಚಿತ್ರಕಲೆಯ ಕಡೆಗಿತ್ತು. ಆ ಕಾಲದ ಮಹಾನ್ ಲೇಖಕರೆಲ್ಲ ಕಲಾ ಪತ್ರಿಕೆಯ ಲೇಖಕರ ಬಳಗಕ್ಕೆ ಸೇರಿದವರಾಗಿದ್ದರು. ‘ಅ. ನ. ಸುಬ್ಬರಾಯರು ಭಾರತೀಯ ಕಲೆಯ ವಿವಿಧ ಸಂಪ್ರದಾಯಗಳನ್ನು ಜನತೆಗೆ ಪರಿಚಯಿಸುವ ಉದ್ದೇಶದಿಂದ ಕಲಾ ಎಂಬ ಮಾಸಪತ್ರಿಕೆ ಹೊರಡಿಸಿದರು. ೧೯೩೦ರಲ್ಲಿ ಆರಂಭವಾದ ಈ ಪತ್ರಿಕೆ ಸುಮಾರು ೨೬ ವರ್ಷ ನಡೆಯಿತು’ ಎಂದು ಡಾ. ವಿಜಯಾ ನುಡಿಯುತ್ತಾರೆ.ಬಿ. ವಿ. ಕೃಷ್ಣಮೂರ್ತಿಯವರ ಸಂಪಾದಕತ್ವದಲ್ಲಿ ಕಲಾನಿವೇದನ ಎಂಬ ಪತ್ರಿಕೆ ೧೯೨೯ರಲ್ಲಿ ಪ್ರಕಟಗೊಂಡಿತು. ಆರ್‍. ಜಿ. ಶೆಣೈಯವರ ಸಂಪಾದಕತ್ವದಲ್ಲಿ ‘ಕಲಾ ಚಂದ್ರ’ ಎಂಬ ವಾರಪತ್ರಿಕೆ ಕಾರ್ಕಳದಿಂದ ೧೯೩೩ರಲ್ಲಿ ಪ್ರಕಟಗೊಂಡು. ಎರಡು ವರ್ಷ ಅಂದರೆ ೧೯೩೫ ರವರೆಗೆ ಪ್ರಕಟಣೆಯಲ್ಲಿದ್ದುದಾಗಿ ತಿಳಿದುಬರುತ್ತದೆ. ೧೯೪೭ರಲ್ಲಿ ಮಂಗಳೂರಿನಿಂದ ಎಂ. ಎಸ್. ಶೆಟ್ಟಿಯವರ ಸಂಪಾದಕತ್ವದಲ್ಲಿ ‘ಕಲಾವಿದ’ ಎಂಬ ಮಾಸಪತ್ರಿಕೆ ಪ್ರಕಟಗೊಂಡಿತು. ಈ ಮೇಲಿನ ಮೂರು ಪತ್ರಿಕೆಗಳು ‘ಕಲಾ’ ಎಂಬ ಅಭಿದಾನವನ್ನು ಬಳಸಿಕೊಂಡಿದ್ದರೂ ವಾಸ್ತವವಾಗಿ ಕಲೆಗೆ ಮೀಸಲಾದ ಪತ್ರಿಕೆಗಳೇ ಎಂಬ ಬಗ್ಗೆ ಸ್ಪಷ್ಟ ಮಾಹಿತಿಗಳಿಲ್ಲ. ಕರ್ನಾಟಕ ರಾಜ್ಯ ಗೆಜೆಟಿಯರಿನಲ್ಲಿ ಈ ಪತ್ರಿಕೆಗಳ ದಾಖಲೆ ಸಿಕ್ಕುವುದು ಬಿಟ್ಟರೆ ಹೆಚ್ಚಿನ ವಿಷಯಗಳು ದೊರೆಯುತ್ತಿಲ್ಲ. . .

ಸಂಕುಲ

ಸೃಜನಶೀಲ ಕಲೆಗಳ ದ್ವೈಮಾಸಿಕ

ಕಲೆಯ ಎಲ್ಲ ಕ್ಷೇತ್ರಗಳು, ಇತರ ಶಾಸ್ತ್ರಗಳು ಒಟ್ಟಾಗಿ ಕೆಲಸಮಾಡುವ ಪ್ರಕ್ರಿಯೆಯ ಶೋಧ ಮತ್ತು ಅವುಗಳನ್ನು ಅನುಭವಿಸುವ, ಅರ್ಥೈಸುವ ಮಾರ್ಗವನ್ನು ಕಂಡುಕೊಳ್ಳುವುದು `ಸಂಕುಲ'ದ ಉದ್ದೇಶ.

ಚದುರಿಹೋದ, `ವೈಯಕ್ತಿಕ ದೂರ'ವನ್ನಪ್ಪಿಕೊಂಡು, ಜನಪ್ರಿಯತೆಯ ತಪ್ಪು ಅರ್ಥೈಕೆಯಲ್ಲಿ ಕೊಚ್ಚಿಹೋಗುತ್ತ ಅಗಾಧ ಅಂತರಗಳನ್ನು ಬೆಳೆಸಿಕೊಳ್ಳುತ್ತಿರುವ ಕಲಾಪ್ರಕಾರಗಳನ್ನು ಅವುಗಳ ಶ್ರೇಷ್ಟತೆಯನ್ನು ಗೌರವಿಸುತ್ತಲೇ, ಕಳಚಿದ ಕೊಂಡಿಗಳನ್ನು ಬೆಸೆಯುವ ಕ್ರಿಯೆಯಲ್ಲಿ ಆಸಕ್ತಿವಹಿಸುತ್ತದೆ `ಸಂಕುಲ.'

ಕಲೆಯ ಮೂಲಕ ವಸ್ತುವೊಂದು ಹೊರಡಿಸಬಹುದಾದ ಅನೇಕ ಧ್ವನಿಗಳನ್ನು ಗ್ರಹಿಸಲು ಕಲೆಯ ಸೃಷ್ಟಿ ವಿಧಾನದಲ್ಲಿ ಇರುವ ಹಲವು ಮಗ್ಗಲುಗಳತ್ತ ಗಮನ ಹರಿಸಬಯಸುತ್ತದೆ `ಸಂಕುಲ'.

ಕಲಾವಿಮರ್ಶೆಯ ಪರಿಭಾಷೆಯನ್ನು ಬಲ್ಲ ಬರಹಗಾರರ ಕೊರತೆಯನ್ನು ಇನ್ನೂ ತುಂಬಿಕೊಳ್ಳಲು ಆಗಿಲ್ಲ ಎಂಬ ಎಚ್ಚರ ನಮಗಿದೆ. ಅದಕ್ಕಾಗಿ ಕೊಂಚ ಕಾಯಬೇಕಾಗಬಹುದು. ಅಂಥ ಕಟ್ಟುವ ಕೆಲಸವನ್ನು `ಸಂಕುಲ' ಸಂತೋಷದಿಂದ ನಿರ್ವಹಿಸುತ್ತದೆ; ಪರಿಪೂರ್ಣವಲ್ಲದಿದ್ದರೂ ಪ್ರಾಮಾಣಿಕ ಪ್ರಯತ್ನ ಮಾಡುತ್ತದೆ.

ಜಾತಿ, ಮತ, ದ್ವೇಷ, ರಾಜಕೀಯ, ಆರ್ಥಿಕ ಏರುಪೇರುಗಳಿಂದಾಗಿ ಬದುಕು ಅಸಹನೀಯ, -ಭಯಾನಕ ಆಗಿದೆ; ಮತ್ತೊಂದೆಡೆ ಪ್ರಕೃತಿಯೇ ಮುನಿದು ನಿಂತಿದೆ. ಆತಂಕ ತುಂಬಿದ ಕ್ಷಣಗಳು, ಮನುಷ್ಯ ಸಂಬಂಧಗಳು ಅರ್ಥ ಕಳೆದುಕೊಳ್ಳುತ್ತಿರುವ ಅಪಾಯಗಳು... ಮನಸ್ಸುಗಳು ಗ್ರಸ್ತವಾಗುತ್ತಿವೆ. ಛಿದ್ರಗೊಂಡ ಮನಸ್ಸುಗಳನ್ನೆಲ್ಲ ಯಾವ ಕ್ಷುದ್ರತೆಯ ಸೋಂಕು ಇಲ್ಲದ ಶ್ರೇಷ್ಠ ಕಲೆಗಳು ಮಾತ್ರ ಕಟ್ಟಬಲ್ಲವು. ಇಂಥ ಒಂದು ಆರಂಭವಾಗಿ `ಸಂಕುಲ' ಪತ್ರಿಕೆ ನಿಮ್ಮ ಕೈಯಲ್ಲಿದೆ. ಒಪ್ಪಿಸಿಕೊಳ್ಳಿ.

ಕಂದ

ಮಕ್ಕಳಿಗೆ ಮಹತ್ವವನ್ನು ಕಲ್ಪಿಸಿರುವ ನಮ್ಮ ಭಾರತದಲ್ಲಿ ಅವರ ಬಾಳನ್ನು ಸರಿಯಾಗಿ ರೂಪಿಸುವ ಕಾರ್ಯ ಸ್ವಲ್ಪವೂ ಸಮರ್ಪಕವಾಗಿಲ್ಲ. ಅವರ ಸರ್ವತೋಮುಖವಾದ ಬೆಳವಣಿಗೆಗೆ ಸಾಧಕವಾಗುವ ಸಾಹಿತ್ಯ ಸಾಮಾಗ್ರಿ ಹೆಚ್ಚುಹೆಚ್ಚಾಗಿ ನಮ್ಮ ದೇಶದಲ್ಲಿ ಬೆಳೆದು ಬರಬೇಕು. ಪರದೇಶಗಳಲ್ಲಿ, ಅದರಲ್ಲಿಯೂ ಅಮೇರಿಕ, ರಷ್ಯಾ ದೇಶಗಳಲ್ಲಿ, ಮಕ್ಕಳ ಪುಸ್ತಕಗಳನ್ನು ಒದಗಿಸುವುದರಲ್ಲಿ ಅಲ್ಲಿನ ಹಿರಿಯರು ಎಷ್ಟೋ ಶ್ರದ್ಧೆ, ಆಸಕ್ತಿಗಳನ್ನು ತೋರಿಸುತ್ತಾರೆ!

ಒಳ್ಳೆಯ ಪುಸ್ತಕಗಳು ಪ್ರಕಟವಾಗದ ಹೊರತು ಕೊಳ್ಳುವವರ ಸಂಖ್ಯೆ ಬೆಳೆಯುವುದಿಲ್ಲ, ಕೊಳ್ಳುವವರು ಹೆಚ್ಚದ ಹೊರತು ಒಳ್ಳೆಯ ಪುಸ್ತಕಗಳು ಪ್ರಕಟವಾಗುವುದಿಲ್ಲ! ಈ ಜಟಿಲ ಸಮಸ್ಯೆಯನ್ನು ಬಿಡಿಸುವ ಧೈರ್ಯದಿಂದ ಮುನ್ನುಗ್ಗುತ್ತಿರುವ ಈ `` ಕಂದನ ಕಾವ್ಯಮಾಲೆ'' ಅಭಿನಂದನಾರ್ಹವಾದುದು. ಶಿಶು ಸಾಹಿತ್ಯ ಸಂಘದ ಬುದ್ಧಿಶಕ್ತಿಯಾಗಿ, ಹೃದಯದ ಮಿಡಿತವಾಗಿ, ಆತ್ಮವಾಗಿ, ದುಡಿಯುತ್ತಿರುವ ಶ್ರೀಮಾನ್ ಎಸ್. ನಾಗೇಶರಾಯರ ಈ ಉದ್ಯಮಕ್ಕಾಗಿ ನಾನು ಅವರನ್ನು ನಾಡಿನ ಕಂದರ ಪರವಾಗಿ ವಂದಿಸುತ್ತೇನೆ. ಕನ್ನಡಿಗರ ಉದಾರಾಶ್ರಯ ದೊರೆತು, ಅವರ ಈ ಸ್ತುತ್ಯಕಾರ್ಯ ಯಶಸ್ವಿಯಾಗಲೆಂದು ಹಾರೈಸುತ್ತೇನೆ.